Thursday 22 November 2018


‘ಸತ್ಯ’ ಸಾಕ್ಷಾತ್ಕಾರ – ಪ್ರೇಮಸಾಯಿ ಅವತಾರ
‘ಸತ್ಯಮೇವ ಜಯತೇ’ ಮಾಂಡಕ್ಯೋಪನಿಷತ್ತಿನಲ್ಲಿ ಕಂಡುಬರುವ ಅಜರಾಮರವಾದ ಸೂಕ್ತಿ. ಸತ್ಯ ಮಾತ್ರ ಜಯಿಸುವುದೆಂಬುದು ಇದರ ಅಂತರಾರ್ಥ. ಈ ಜಯಿಸುವ ‘ಸತ್ಯ’ದ ಹುಡುಕಾಟದಲ್ಲಿ ಪ್ರತಿ ವ್ಯಕ್ತಿಯೂ ತೊಡಗುತ್ತಾನೆ. ಆ ಸತ್ಯ ಆತನಿಗೆ ಅನುಭವಕ್ಕೆ ಒದಗಿದಾಗ ಮಾತ್ರವೇ, ಆತನಿಗೆ ಜಯದ ಅನುಭವ ಉಂಟಾಗುವುದು. ಹಾಗಾದರೆ, ಈ ‘ಸತ್ಯ’ವೆಂದರೇನು? ಅದರ ಸ್ವರೂಪ ಎಂತಹುದು? ‘ಸತ್ಯ’ ಮಾತ್ರವಿದೆಯೇ? ಅಥವಾ ‘ಸತ್ಯಗಳು’ ಇದೆಯೇ?, ಅದು ತಂದುಕೊಡುವ ‘ಜಯ’ದ ಅನುಭವ ಎಂತಹುದು? ಈ ಎಲ್ಲಾ ಪ್ರಶ್ನೆಗಳು ವ್ಯಕ್ತಿಯನ್ನು ಕಾಡುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ‘ಸತ್ಯ’ ಸಾಕ್ಷಾತ್ಕಾರವಾಗುವ ಬಗೆಯ ವಿವೇಚನೆ ಈ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲುದೇನೋ?!......
          ಮೊದಲಿಗೆ ಸತ್ಯ’ವೆಂದರೇನು? ಎಂಬ ಪ್ರಶ್ನೆಗೆ ಪ್ರಜ್ಞಾವಂತರು, ಪಂಡಿತರು ನೀಡುವ ವ್ಯಾಖ್ಯಾನ ಘನವಾದ, ಶಿಷ್ಠವಾದ ನೆಲೆಯಲ್ಲಿದ್ದು ನಮ್ಮಂತಹ ಹುಲು ಮಾನವರಿಗೆ ಅರ್ಥವೇ ಆಗುವುದಿಲ್ಲ. ಆದರೆ, ಒಬ್ಬ ಸಾಮಾನ್ಯನ ಉತ್ತರವನ್ನು ಗಮನಿಸೋಣ. “ಯಾವುದು ಸುಳ್ಳಲ್ಲವೋ, ಅದೇ ಸತ್ಯ!..............”. ಇದಕ್ಕಿಂತ ‘ಸತ್ಯ’ಕ್ಕೆ ಸರಳ ಸೂಕ್ತ ವಿವರಣೆ ಮತ್ತೊಂದಿದೆ ಎಂದು ನನಗೆ ಅನಿಸುವುದಿಲ್ಲ. ಹೌದು!...... “ಸುಳ್ಳಲ್ಲದುದೇ ಸತ್ಯ”........... ಅಂದರೆ, ವ್ಯಕ್ತಿಗೆ ಉಂಟಾಗುವ ‘ನಿಜಾನುಭವ’. ‘ಬೆಲ್ಲ’ವನ್ನು ತಿಂದಾಗ ಉಂಟಾಗುವ  ‘ಸಿಹಿ’ಯ ಅನುಭವ, ಬೇವು ತಿಂದಾಗ ಉಂಟಾಗುವ ‘ಕಹಿ’ಯ ಅನುಭವ ‘ಸತ್ಯ’ವೇ ಅಲ್ಲವೇ?!........ ಈಗ ಸತ್ಯದ ಇನ್ನೊಂದು ಮಗ್ಗುಲ್ಲನ್ನು ಗಮನಿಸೋಣ!. ಆರೋಗ್ಯವಂತನಿಗೆ ಸವಿರುಚಿಯ ಅನುಭವ ನೀಡುವ, ಬೂರಿಭೋಜನ, ಜ್ವರಹಿಡಿದ ರೋಗಿಯೊಬ್ಬನಿಗೆ, ಸವಿರುಚಿಯ ಬದಲು ಕಹಿ – ಕಹಿಯಾಗುತ್ತದೆ. ಈಗ ಹೇಳಿ ಯಾವುದು ಸತ್ಯ!?............ ಸಿಹಿ ತಿಂಡಿಯನ್ನು ತಿಂದ ಬಾಯಿಗೆ, ಸಕ್ಕರೆಯಲ್ಲಿ ಮಿಂದ ಕಾಫಿಯು, ತನ್ನ ಮುಂಚಿನ ಸಿಹಿಯ ಪ್ರಮಾಣವನ್ನು ಕಳೆದುಕೊಂಡ ಅನುಭವವಾಗುವುದಿಲ್ಲವೇ?!...........ಹಾಗಾದಲ್ಲಿ ಇವುಗಳಲ್ಲಿ ಯಾವುದು ಸತ್ಯ?!.............. ಬೆಲ್ಲ ಸಿಹಿ ಎನ್ನುವುದು, ಬೇವು ಕಹಿ ಎನ್ನುವುದು ನಾವು ಅವುಗಳ ಸೇವನೆಯಿಂದ ಉಂಟಾಗುವ ಅನುಭವದಿಂದ. ಹಾಗಾಗೀ ಅನುಭವವೇ ‘ಸತ್ಯ’. ಒಬ್ಬರಿಗೆ ಸುಳ್ಳು ಎನಿಸುವ ಸಂಗತಿಯು ಮತ್ತೊಬ್ಬರಿಗೆ ‘ಸತ್ಯ’ವೂ ಆಗಬಹುದು. ಅಂತೆಯೇ ಒಬ್ಬರಿಗೆ ‘ಸತ್ಯ’ವೆನಿಸಿದ ಸಂಗತಿಯು ಮತ್ತೊಬ್ಬರಿಗೆ ‘ಸುಳ್ಳು’ ಎನಿಸಬಹುದು. ಅಂತೆಯೇ ‘ಸತ್ಯ’ದ ಸ್ವರೂಪವನ್ನು ಇಂತಿಷ್ಟೇ ಎಂದು ನಿರ್ಧರಿಸುವುದು ಸಾದ್ಯವಿಲ್ಲ. ‘ಸತ್ಯ’ ಅನುಭವಗಮ್ಯವಾದುದು, ‘ಸತ್ಯ’ ಅನುಭವವೇದ್ಯವಾದುದು. ಒಬ್ಬೊಬ್ಬರ ಅನುಭವವೂ ಒಂದೊಂದು ರೀತಿಯ ‘ಸತ್ಯ’ವನ್ನು ಅನ್ವೇಷಿಸುತ್ತವೆ. ಹಾಗಾಗೀ, ‘ಸತ್ಯ’ವೆನ್ನುವುದಕ್ಕಿಂತ, ‘ಸತ್ಯಗಳು’ ಎಂದರೆ, ಸೂಕ್ತವಾದೀತು. ಈ ಸತ್ಯಗಳ ಅನ್ವೇಷಣೆಯಲ್ಲಿಯೇ ವ್ಯಕ್ತಿ ತೊಡಗಿರುತ್ತಾನೆ. ಆತನ ಸಾಧನೆಯ ಫಲವಾಗಿ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ, ‘ಸತ್ಯ’ದ ಚರಮತೆಯನ್ನು ಕಂಡುಕೊಳ್ಳುತ್ತಾನೆ. ಅಂದರೆ, ವಿಜ್ಞಾನಿ, ಸಾಹಿತಿ, ಕಲಾಕಾರ, ತಂತ್ರಜ್ಞಾನಿ, ಮನೋವಿಜ್ಞಾನಿ, ತತ್ತ್ವಜ್ಞಾನಿ, ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತರಾಗಿ, ‘ಸತ್ಯ ಶೋಧನೆ’ಯಲ್ಲಿ ತೊಡಗಿ, ಆ ಕ್ಷೇತ್ರದ ಶ್ರೇಷ್ಠ ಅನುಭವವನ್ನು ಪಡೆಯುತ್ತಾರೆ. ಆ ಶ್ರೇಷ್ಠತೆಯ ಅನುಭವ ಹಾಗೂ ಅದರ ಹಂಚಿಕೆ, ಅವರನ್ನು ‘ಅಮರ’ರನ್ನಾಗಿಸುತ್ತದೆ. ವ್ಯಕ್ತಿ ಆತನ ಚಿಂತನೆಗಳ ರೂಪದಲ್ಲಿ ‘ಚಿರಂಜೀವಿ’ಯಾಗಿರುತ್ತಾನೆ.  ಈ ನೆಲೆಯಲ್ಲಿಯೇ ನ್ಯೂಟನ್, ಅರಿಸ್ಟಾಟಲ್, ವಾಲ್ಮೀಕಿ, ಬುದ್ಧ, ಬಸವ, ವಿವೇಕ, ಸಾಯಿಬಾಬಾರಂತವರು ಇಂದಿಗೂ ‘ಚಿರಂಜೀವಿಗಳು. ಇವರೆಲ್ಲರಿಗೆ ಆದಂತಹ ‘ಸತ್ಯಾನುಭವ’ ಒಂದೇ ರೀತಿಯದಲ್ಲ. ಬಗೆಬಗೆಯ ‘ಸತ್ಯಾನುಭವ’ದ ಆಲೋಡನೆ ಇಂತಹ ಮಹಾನುಭಾವರಿಂದಾಯಿತು. ಇದನ್ನೇ ಆಧ್ಯಾತ್ಮಿಕ ಭಾಷೆಯಲ್ಲಿ, ‘ಆತ್ಮ ಸಾಕ್ಷಾತ್ಕಾರ’ವೆಂದಿರಬಹುದು!....... ವ್ಯಕ್ತಿಯೊಬ್ಬನ ಆತ್ಮಾನುಭವಕ್ಕೆ ‘ಸತ್ಯ’ ಒದಗಿಬಂದ ರೀತಿ ಈ ಸಾಕ್ಷಾತ್ಕಾರ ಎನ್ನಬಹುದೇನೋ?!............... ಹಾಗಾಗೀ ತನ್ನ ಆತ್ಮಾನುಭವಕ್ಕೆ ಒದಗುವ ಸತ್ಯವನ್ನು ವ್ಯಕ್ತಿಯೇ ಗುರುತಿಸಬೇಕು ಪರಂತು, ಅನ್ಯತಾ ಮತ್ತೊಬ್ಬರಿಂದ ಸಾಕ್ಷಾತ್ಕಾರ ಒದಗಿಬರುವುದು ಸಾಧ್ಯವಿಲ್ಲ!........... ಗಾಂಧೀಜಿಯವರ ‘ನನ್ನ ಸತ್ಯಾನ್ವೇಷಣೆ’ ಎಂಬ ಪದಪುಂಜ ಇಲ್ಲಿ ಅತ್ಯಂತ ಸೂಕ್ತವೆಂದು ಪರಿಭಾವಿಸಬಹುದು. ಹೌದು!. ಪ್ರತಿ ವ್ಯಕ್ತಿಗಳೂ ಅವರವರ ಸತ್ಯಾನ್ವೇಷಣೆಯಲ್ಲಿ ತೊಡಗುತ್ತಾರೆ ಪರಂತು, ‘ಸತ್ಯ’ ಎಂಬುದು ಒಂದೇ ಇರುವುದು ಸಾಧ್ಯವಿಲ್ಲ. ಯಾರು ಈ ಸತ್ಯಗಳ ಅನ್ವೇಷಣೆಯಲ್ಲಿ ತಮ್ಮ ಚರಮತೆಯನ್ನು ಸಾಧಿಸುತ್ತಾರೋ?!...... ಸಾಧಿಸಿದ ‘ಸತ್ಯಾನುಭವ’ವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಸಮರ್ಥರಾಗುತ್ತಾರೋ?!,,,,,,,,, ಅಂತಹ ವ್ಯಕ್ತಿಗಳೇ ‘ಚಿರಂಜೀವಿತ್ವ’ವನ್ನು ಪಡೆಯುವುದು. ಅವರೇ ದೇಶ, ಕಾಲ ಇತ್ಯಾದಿಗಳ ಬಂಧನಕ್ಕೆ ಒಳಗಾಗದೇ, ಅನಂತ ಬ್ರಹ್ಮಾಂಡದಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳ ನಡೆ, ನುಡಿ ಎಲ್ಲವೂ ಅನ್ವೇಷಿತ ಸತ್ಯದಲ್ಲಿ ಅಂತರ್ಗತವಾಗಿರುತ್ತದೆ. ಹಾಗಾಗೀ ಶಾಶ್ವತ ಸತ್ಯಗಳೊಂದಿಗೆ ವ್ಯಕ್ತಿಗಳ ಸಾಧನೆ ಲೀನವಾಗಿಬಿಟ್ಟು, ಅನ್ವೇಷಿತ ಸತ್ಯಕ್ಕೂ ವ್ಯಕ್ತಿಗೂ ಭೇದವಿಲ್ಲದ ಸ್ಥಿತಿ ಎದುರಾಗಿ, ಸತ್ಯವೇ ತಾವಾಗಿ ನಿಲ್ಲುತ್ತಾರೆ. ‘ಚಲನೆಯ ನಿಯಮ’ಗಳೆಂಬ ನ್ಯೂಟನ್ ಇನ್ನೂ ಜನಮನಗಳಲ್ಲಿ, ಸಜೀವಿಯಾಗಿದ್ದಾರೆ. ಕರುಣೆಯ ಸಾಕಾರಮೂರ್ತಿಯಾಗಿ ಏಸು ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ‘ಭಾವಸತ್ಯ’ವನ್ನು ಜನಮನಗಳಲ್ಲಿ ಪ್ರತಿಷ್ಠಾಪಿಸಿದ ಕವಿಗಳು’ ‘ಮಿಥ್ಯಾಕಲ್ಪನೆ’ಯನ್ನು ಬಳಸಿದರೂ ಶತಶತಮಾನಗಳಿಂದ ತಮ್ಮದೇ ಅಸ್ಥಿಸ್ವವನ್ನು ಉಳಿಸಿಕೊಂಡಿದ್ದಾರೆ. ಏಕೆಂದರೆ, ಸತ್ಯವು ಪರಿಭಾವನೆಯಲ್ಲಿ ಅಸ್ಥಿತ್ವವನ್ನು ಪಡೆಯುತ್ತದೆ. ಬಹುಶಃ ಯಾರು ಈ ಸತ್ಯದ ಚರಮತೆಯನ್ನು ಗುರುತಿಸಲು ಸಾಧ್ಯವಿಲ್ಲವೋ?!.......... ಅವರು ಸಾಮಾನ್ಯರಾಗುತ್ತಾರೆ. ಗುರುತಿಸಿದ ಮಹಾನುಭಾವ, ಗಣ್ಯನಾಗಿ ಚಿರಕಾಲ ಉಳಿಯುತ್ತಾನೆ.   ಹಾಗಾಗಿಯೇ, “ಸತ್ಯಂ ಜ್ಞಾನಮನಂತಂ ಬ್ರಹ್ಮ” ಎಂದು ಗುರುತಿಸುವುದು. ಸತ್ಯದ ಜ್ಞಾನ ಹೊಂದಿದವನೇ ಅನಂತ ಬ್ರಹ್ಮಾಂಡದಲ್ಲಿ ನೆಲೆ ಕಾಣುವವನು ಎಂಬುದು ಈ ಸೂಕ್ತಿಯ ಭಾವ.
          ಈ ಸತ್ಯದ ಸಾಕ್ಷಾತ್ಕಾರಕ್ಕೆ ವ್ಯಕ್ತಿ ಜೀವನದ ಪ್ರತಿ ನಿಮಿಷಗಳಲ್ಲೂ ಕಾರ್ಯೋನ್ಮುಖರಾಗಿರಬೇಕು. ಕಾರ್ಯತತ್ಪರತೆ ಮಗ್ನತೆಯನ್ನು ಸೃಷ್ಟಿಸಿ, ‘ಸತ್ಯಾನ್ವೇಷಣೆ’ಗೆ ಸಹಕಾರಿಯಾಗುತ್ತದೆ. ಯಾರು ಈ ಮಗ್ನತೆಯನ್ನು ಕಳೆದುಕೊಳ್ಳುವರೋ, ಅವರಿಗೆ ಸತ್ಯದ ಸಾಕ್ಷಾತ್ಕಾರವಾಗುವುದು ವಿಳಂಬವಾಗುತ್ತದೆ. ಈ ಸತ್ಯವು ವ್ಯಕ್ತಿಯ ಚರಮ ಚಿಂತನೆಯಲ್ಲಿ, ಪ್ರಕಾಶಿಸುತ್ತದೆ. ಚಿಂತನೆಯು ಜ್ಞಾನ, ಭಾವ, ಕಾರ್ಯರೂಪದಲ್ಲಿ ಅಭಿವ್ಯಕ್ತಗೊಳ್ಳಬಹುದು. ಈ ಪಾಂಡಿತ್ಯದ ಪದಪುಂಜಗಳಿಗೆ ಖಂಡಿತವಾಗಿಯೂ ಇದನ್ನು ಸುಲಭವಾಗಿ ಅರ್ಥೈಸುವ ಶಕ್ತಿಯಿಲ್ಲ. ಆದರೆ, ವ್ಯಕ್ತಿಗಳ ಜೀವನ ನಿದರ್ಶನ ಇದನ್ನು ಸುಲಭವಾಗಿ ಅರ್ಥೈಸಬಹುದೇನೋ?!........ ಗುಜರಾತಿನಲ್ಲಿ ಪ್ರತಿಷ್ಠಾಪಿಸಲಾದ, ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ಜಗತ್ತಿನಲ್ಲಿಯೇ ಅತಿ ಎತ್ತರವಾದ ಕಬ್ಬಿಣದ ಪ್ರತಿಮೆ. ಈ ಪ್ರತಿಮೆಗೆ ನೀಡಲಾಗಿರುವ ಹೆಸರು, ‘ಐಕ್ಯತೆಯ ಪ್ರತಿಮೆ’ ಎನ್ನುವುದಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲರು ತಮ್ಮ ಜೀವನದಲ್ಲಿ ಸಾಧಿಸಿದ ಸತ್ಯ ಇದೇ ‘ಐಕ್ಯತೆ’ಯೇ ಆಗಿದೆ. ಈ ಐಕ್ಯತೆಯನ್ನು ಸಾಧಿಸಲು ಅವಶ್ಯಕ ಸಾಮರ್ಥ್ಯಬೇಕು. ಈ ಐಕ್ಯತೆ ಸಾಧಿಸುವ ಸಾಮರ್ಥ್ಯದ ಹಿಂದಿನ ‘ಸತ್ಯ’ವನ್ನು ಪಡೆದುಕೊಂಡಿದ್ದರು. ತಮ್ಮ ತಂತ್ರಗಾರಿಕೆಯಿಂದ, ಸಾಧ್ಯವಾಗದಿದ್ದರೆ, ಬಲಪ್ರಯೋಗಿಸಿಯಾದರೂ ಭಾರತದ ಐಕ್ಯತೆಯನ್ನು ಸಾಧಿಸಿದ್ದರು. ಹಾಗಾಗೀ ಇಂದು ಈ ಕಬ್ಬಿಣದ ಮನುಷ್ಯನ ಕಬ್ಬಿಣದ ಪ್ರತಿಮೆ ಬಿರು ಅಲೆಗಳ ಸಾಗರದ ಮಧ್ಯದಲ್ಲಿ ಗಟ್ಟಿಯಾಗಿ ನಿಂತಿರುವುದು. ಅವರು ಕಂಡಕೊಂಡ ‘ಐಕ್ಯತೆ’ಯ ಸತ್ಯ ನಮ್ಮ ಭಾರತೀಯರ ಜನಮನದಲ್ಲಿ ಬೇರೂರಿದ ಪರಿಣಾಮವಾಗಿ, ಇಂದು ಪ್ರತಿಮೆಯ ಪ್ರತೀಕ ರೂಪವಾಗಿ ಶಾಶ್ವತವಾಗಿ ನೆಲೆ ನಿಂತಿರುವುದು.
          ವ್ಯಕ್ತಿಯು ಕಂಡುಕಂಡ ‘ಜೀವನ ಸತ್ಯ’ಗಳು ಆತನ ಚಿಂತನೆಗಳಲ್ಲಿ ಒಡಮೂಡುತ್ತವೆ. ಆ ಚಿಂತನೆಗಳೇ ವ್ಯಕ್ತಿಯ ಅವತಾರಗಳು ಪರಂತು, ವ್ಯಕ್ತಿಯ ದೈಹಿಕ ಪ್ರಾದುರ್ಭಾವವಲ್ಲ. ಆದರೆ, ಅವರ ಮಾತಿನ ಹಿಂದೆ ಅಡಗಿರುವ ಸತ್ಯವನ್ನು ನಾವು ಅರಿಯುವಲ್ಲಿ ಎಡವುತ್ತೇವೆ. ಸತ್ಯದ ವಾಸ್ತವತೆಯನ್ನು ಅರಿಯದೇ, ಅವರ ಮಾತುಗಳನ್ನು ನಮ್ಮ ದೃಷ್ಟಿಕೋನದಲ್ಲಿ ಅರ್ಥೈಸಿಕೊಂಡು ಆ ನೆಲೆಗಟ್ಟಿನಲ್ಲಿ ವಿವರಿಸಲು ನಾವು ತೊಡಗಿ ಬಿಡುತ್ತೇವೆ. ಇಲ್ಲಿ ಭ್ರಮಿತರಾಗುವುದು ನಾವೇ ಪರಂತು, ಸತ್ಯವಲ್ಲ. ಸತ್ಯ ಎಂದೆಂದಿಗೂ ಹಾಗೇ ಇರುತ್ತದೆ. ಎಲೆ ಅಡಿಕೆಯಗಿದ ಬಾಯಿಯಲ್ಲಿ ರುಚಿಯಾದ ಲಡ್ಡು ರುಚಿಸುವುದಿಲ್ಲವೆಂದರೆ, ಅದು ಲಡ್ಡುವಿನ ದೋಷವಲ್ಲ. ಎಲೆ ಅಡಿಕೆಯಗಿದು ತಕ್ಷಣವೇ ಲಡ್ಡು ತಿಂದ ನಮ್ಮ ದೋಷ. ಹೀಗೆ ಅಜ್ಞಾನದಿಂದ ಉಂಟಾಗುವ  ‘ಭ್ರಮೆ’ಯನ್ನೇ ಶ್ರೀ ಶಂಕರರು, ‘ಮಾಯೆ’ ಎಂದರು.  ಜಡ್ಡುಗಟ್ಟಿದ ನಾಲಗೆಯನ್ನು ಸ್ವಚ್ಛಗೊಳಸಿ, ಲಡ್ಡು ಸೇವಿಸಿದರೆ, ನಮಗೆ ಅದರ ಸವಿರುಚಿಯ ಅನುಭವ ಸಾಧ್ಯ. ಹಾಗಾಗೀ, ಜ್ಞಾನ, ಕರ್ಮಗಳ ಮಾರ್ಗವನ್ನು ಅನುಸರಿಸಿ, ಮನೋಭ್ರಮೆಯನ್ನು ದೂರಿಕರಿಸಬೇಕು. ಆಗ ಸತ್ಯದರ್ಶನವಾಗವುದು ಸಾಧ್ಯವಾಗುತ್ತದೆ.
          ‘ಅವತಾರಗಳು’ ಎಂದರೆ, ಸತ್ಯ ವ್ಯಕ್ತಿಗೆ ಗೋಚರವಾಗುವ ಬಗೆ, ಜೀವನದ ಆದಿಯಲ್ಲಿ ಕಂಡುಕೊಂಡ ಸತ್ಯಗಳು, ವ್ಯಕ್ತಿಯ ಜೀವನದ ಅಂತ್ಯದಲ್ಲಿ ಬೇರೆ ರೀತಿಯಲ್ಲಿ ಗೋಚರಿಸಬಹುದು. ಆಗ ವ್ಯಕ್ತಿ ಸತ್ಯದ ಮತ್ತೊಂದು ಮಗ್ಗುಲನ್ನು ಜಗತ್ತಿಗೆ ಪರಿಚಯಿಸಿ ಸಾಗುತ್ತಾನೆ. ಸತ್ಯಸಾಯಿಬಾಬಾರವರ ವೈಚಾರಿಕತೆಯಲ್ಲಿಯೂ ಅವರಿಗೆ ಗೋಚರಿಸಿದ ‘ಸತ್ಯ’ವು ಅವರ ಚಿಂತನೆಗಳಲ್ಲಿ ಸಾಕಾರ ರೂಪವನ್ನು ಪಡೆದಿದೆ. ಸತ್ಯ ಸಾಯಿಬಾಬಾರವರ ಚಿಂತನೆಗಳಲ್ಲಿ ಪ್ರಮುಖವಾದ ಚಿಂತನೆ, “Love all, serve all: Help ever, hurt never” ಎಂಬುದಾಗಿದೆ. ಇದು ಶ್ರೀ ಸತ್ಯ ಸಾಯಿಬಾಬಾರವರು ಕಂಡುಕೊಂಡು ಶ್ರೇಷ್ಠವಾದ ಸತ್ಯ. ಇದನ್ನೇ ಅವರು ತಮ್ಮ ಅನುಭವವೇದ್ಯ ಅವತಾರವಾದ ‘ಪ್ರೇಮಸಾಯಿ’ ಎಂದು ಕರೆದದ್ದು. ಏಕೆಂದರೆ, ಸತ್ಯಸಾಯಿಬಾಬಾರವರ ಜೀವನದರ್ಶನವನ್ನು ಸಿಂಹಾವಲೋಕನ ಮಾಡಿದಾಗ, ಅವರ ಕಾರ್ಯಗಳಲ್ಲಿ ಈ ಅವತಾರ ಪ್ರತಿಫಲಿತವಾಗಿರುವುದು ಗೋಚರವಾಗುತ್ತದೆ. ಸತ್ಯಸಾಯಿಬಾಬಾ ಜಾತಿ, ಧರ್ಮ, ಲಿಂಗಭೇದವಿಲ್ಲದೇ, ಇಡೀ ಜಗತ್ತನ್ನೇ ಪ್ರೀತಿಸಿದರು. ಅವರ ಸಮಾಜ ಸೇವಾ ಕೈಂಕರ್ಯವನ್ನು ಗಮನಿಸಿದಾಗ, ಶಿಕ್ಷಣ, ವೈದ್ಯಕೀಯ, ಸಮಾಜ ಎಲ್ಲದರಲ್ಲೂ ಸೇವೆಯನ್ನು ಕೈಗೊಂಡರು. ಸೇವೆಯೆಂದರೆ, ಪ್ರತಿಫಲಾಪೇಕ್ಷೆಯಿರದಂತಹ ಕಾರ್ಯ. ಅವರ ಸೇವೆಯೂ ದೇಶ, ಜಾತಿ, ಧರ್ಮ ಇತ್ಯಾದಿಗಳೆಲ್ಲವನ್ನೂ ಮೀರಿದ್ದು. ಹಾಗಿರದಿದ್ದರೆ, ಆಂಧ್ರದಲ್ಲಿ ಜನಿಸಿದ, ಬಾಬಾ ಕರ್ನಾಟಕಕ್ಕೆ ಕುಡಿಯುವ ನೀರಿನ ಯೋಜನೆಯನ್ನು ವಿಸ್ತರಿಸುತ್ತಿರಲಿಲ್ಲ. ಸಹಕಾರ ಅವರ ಚಿಂತನೆ, ಮತ್ತೊಬ್ಬರಿಗೆ ಎಂದೂ ನೋವು ಉಂಟಾಗುವಂತೆ ವರ್ತಿಸಲಿಲ್ಲ!......... ಈ ಚಿಂತನೆಗಳ ಸತ್ಯವನ್ನು ಸಾಯಿಬಾಬ ಅನ್ವೇಷಿಸಿದುದು ಮಾತ್ರವಲ್ಲ, ಅದನ್ನು ತಮ್ಮ ಅನುಯಾಯಿಗಳ ಆಲೋಚನೆಗೂ ನಿಲುಕುವಂತೆ ಮಾಡಿದ್ದರು ಮತ್ತು ಹೀಗೆ ಕಂಡುಕೊಂಡ ಸತ್ಯವನ್ನು ಅನುಯಾಯಿಗಳಲ್ಲಿ ಪ್ರತಿಷ್ಠಾಪಿಸಿಯೂ ಇದ್ದರು. ಬಾಬಾರವರ ಅನುಯಾಯಿಗಳ ನಡೆ-ನುಡಿಗಳಲ್ಲಿ ಪ್ರತಿಫಲಿತವಾದ ಅವರ ಚಿಂತನೆಗಳ ಅನುಭವವನ್ನು ನಾನೂ ಅನುಭವಿಸಿದ್ದೇನೆ. ಒಮ್ಮೆ ಪುಟ್ಟಪರ್ತಿಗೆ ‘ಯುವ ಜನೋತ್ಸವ’ಕ್ಕೆ ನಾನು ತೆರಳಿದ್ದೆ. ಆಗ ಆದಂತಹ ಅನುಭವವನ್ನು ಹಂಚಿಕೊಳ್ಳಲೇಬೇಕು. ಪುಟ್ಟಪರ್ತಿ ಒಂದು ಪವಿತ್ರ ಸರ್ವಧರ್ಮ ಸಮನ್ವಯದ ಕ್ಷೇತ್ರ. ಈ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳಿಗೇನೂ ಕೊರತೆ ಇಲ್ಲ. ನಿತ್ಯವೂ ಸಮಾರಾಧನೆಯೇ! ನಿತ್ಯವೂ ಸೇವೆಯೇ!............ ಈ ಸೇವೆಯನ್ನು ಪೂರೈಸಲು ಸತ್ಯಸಾಯಿಬಾಬಾರವರ ಅನುಯಾಯಿಗಳು ನಿಯೋಜನೆಗೊಳ್ಳುತ್ತಿದ್ದರು. ಭಾರತದ ಅಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಭಕ್ತರು ಆಗಮಿಸಿ, ಸೇವೆಯನ್ನು ಸಲ್ಲಿಸುತ್ತಿದ್ದರು. ಕೆಲವರು ಅಡುಗೆ ಮನೆಯಲ್ಲಿ ಸೇರಿಕೊಂಡು ಬರುವ ಭಕ್ತಾದಿಗಳಿಗೆ ರುಚಿರುಚಿಯಾದ ಭಕ್ಷ್ಯಗಳನ್ನು ತಯಾರಿಸಿ, ಉಣಬಡಿಸುತ್ತಿದ್ದರೆ, ಮತ್ತೆ ಕೆಲವರು ಅಲ್ಲಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ಶುಶ್ರೂಷೆ ಮಾಡುತ್ತಾ, ಸೇವೆ ಸಲ್ಲಿಸುತ್ತಿದ್ದರು. ಮತ್ತೆ ಕೆಲವರು ಶುಚಿತ್ವದ ಸೇವೆಯನ್ನೂ ಸಲ್ಲಿಸುತ್ತಿದ್ದರು.. ನಾನು ‘ಯುವ ಜನೋತ್ಸವ’ದಲ್ಲಿ ಪಾಲ್ಗೊಳ್ಳುವ ಭಾಗೀದಾರನಾಗಿ, ಪಾಲ್ಗೊಂಡಿದ್ದೆ. ಅಲ್ಲಿರುವ ಬಾಬಾರ ಅನುಯಾಯಿಗಳಿಗೆ ನಮ್ಮೆಲ್ಲರಿಗೂ ಸೇವೆ ಒದಗಿಸುವ ಕಾರ್ಯ. ನಾಲ್ಕು ದಿನಗಳ ಸಮ್ಮೇಳನದಲ್ಲಿ ಸಾಕಷ್ಟು ಅಧಿವೇಶನ ಜರುಗುತ್ತಿತ್ತು. ಸೇವಾರ್ಥಿಗಳು ಸೇವೆಯ ಬಿಡುವಿನ ಸಮಯದಲ್ಲಿ, ಅಧಿವೇಶನದಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಹೀಗೆ ಅಧಿವೇಶನದಲ್ಲಿ ಪಾಲ್ಗೊಂಡಾಗ, ಕರ್ನಾಟಕದ ಒಬ್ಬ ವೈದ್ಯರು ನನಗೆ ಪರಿಚಿತರಾದರು. ಉಭಯ ಕುಶಲೋಪರಿ ಆಯಿತು. ನಂತರ ಅವರು ತಮ್ಮ ಸೇವೆಗೆ ತೆರಳಿದರು. ದಿನವೂ ಬೆಳಿಗ್ಗೆ ಏಳುವುದು, ನಿತ್ಯಕರ್ಮಗಳನ್ನು ಪೂರೈಸುವುದು, ಅಧಿವೇಶನಗಳಿಗೆ ತೆರಳುವುದು, ಪುಟ್ಟಪರ್ತಿಯ ಪರಿವೀಕ್ಷಣೆ ನನ್ನ ನಿತ್ಯದ ಕಾರ್ಯಪಟ್ಟಿಯಾಯಿತು. ಅಧಿವೇಶನದ ಮೂರನೇ ದಿನ ಶೌಚಾಲಯಕ್ಕೆ ತೆರಳಿದಾಗ, ನನಗೆ ಆಶ್ಚರ್ಯ ಕಾದಿತ್ತು. ಅಂದು ಭೇಟಿಯಾದ ಕರ್ನಾಟಕದ ವೈದ್ಯರು ಅಲ್ಲಿ ಶೌಚಾಲಯವನ್ನು ಶುಚಿಗೊಳಿಸುತ್ತಿದ್ದರು. ಆಶ್ಚರ್ಯದಿಂದ ಕೇಳಿದೆ!.......... “ಸರ್! ನೀವು ಇಲ್ಲಿ?!........ ಈ ಕಾರ್ಯ!”........... ಅದಕ್ಕೆ ಅವರು, ಕೊಟ್ಟ ಪ್ರತಿಕ್ರಿಯೆಗೆ ನಾನು ಅಕ್ಷರಶಃ ಸ್ತಬ್ಧನಾಗಿದ್ದೆ!......... ಅವರು “ತಾವು ಮಾಡುತ್ತಿರುವುದು ಸೇವೆ!........ ಸೇವೆಯಲ್ಲಿ ಯಾವುದೇ ಮೇಲು-ಕೀಳುಗಳೆಂಬ ಭೇದವಿಲ್ಲ!” ಎಂದು ಉತ್ತರ ನೀಡಿದ್ದರು. ನನಗೆ ‘ಸಾಯಿಸತ್ಯ’ ಅರಿವಿಗೆ ಬಂದಿತ್ತು. ಅನುಯಾಯಿಗಳ ಮಾಧ್ಯಮ ರೂಪದಲ್ಲಿ, ಸತ್ಯಸಾಯಿ ಚಿಂತನೆಗಳು ಜನ್ಮತಾಳಿದ್ದವು. ಬಹುಶಃ ನಾನೂ, ನಮ್ಮ ಮನೆ ಮಂದಿಯೆಲ್ಲಾ ಈ ಚಿಂತೆನೆಗಳ ಪ್ರಭಾವಕ್ಕೆ ಒಳಗಾಗಿದ್ದೆವು. ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ (ರಿ) ಆಯೋಜಿಸುವ ಎಲ್ಲಾ ಕಾರ್ಯಗಳಲ್ಲಿ ಇಂದಿಗೂ ನಾವು ಪಾಲ್ಗೊಳ್ಳುತ್ತಾ ಸಾಗುತ್ತಿದ್ದೇವೆ. ಈ ಸೇವಾ ಕೈಂಕರ್ಯವನ್ನು ಕೈಗೊಳ್ಳುತ್ತಿರುವ ನಮಗೂ ಸೇವೆಯಿಂದಾಗುವ ‘ಆತ್ಮತೃಪ್ತಿ’ಯ ಅನುಭವ ಹಂಚಿಕೊಳ್ಳಲು ಇದಕ್ಕಿಂತ ಸದವಕಾಶ ಮತ್ತೊಂದಿಲ್ಲ. ಟ್ರಸ್ಟ್ ಆಯೋಜಿಸುವ ‘ನಾರಾಯಣ ಸೇವೆ’ ವಿಶಿಷ್ಟ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಅನ್ನಕ್ಕಾಗಿ ಹಪಹಪಿಸುವ ನಿರ್ಗತಿಕರನ್ನು ಕರೆದು, ‘ಅನ್ನದಾನ’ವನ್ನು ಏರ್ಪಡಿಸಲಾಗುತ್ತದೆ. ಬಂದ ಭಿಕ್ಷುಕರನ್ನು ಅತ್ಯಾದರದಿಂದ ಗೌರವಿಸಿ, ಉಣಬಡಿಸಿ, ಕಳುಹಿಸಲಾಗುತ್ತದೆ. ಅವರ ಎಂಜಲೆಲೆಗಳನ್ನು ಸೇವಾಕರ್ತರಾದ ನಾವೇ ಎತ್ತಿ, ಶುಚಿಗೊಳಿಸುವುದು ಕ್ರಮವಾಗಿದೆ. ಈ ಕೈಂಕರ್ಯದಿಂದ ಉಂಟಾಗುವ ‘ಆತ್ಮಾನಂದ’ ಅಮಿತವಾದುದು. ನಿಜವಾಗಿಯೂ ಸತ್ಯಸಾಯಿ ಚಿಂತನೆಗಳು ಈ ಕಾರ್ಯಗಳ ರೂಪದಲ್ಲಿ  ಎನ್ನುವುದರಲ್ಲಿ ಪ್ರತಿಷ್ಠಾಪನೆಗೊಂಡಿರುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸತ್ಯಸಾಯಿ ಮತ್ತೊಮ್ಮೆ ಈ ಪ್ರೇಮ, ಸೇವೆಗಳ ರೂಪದಲ್ಲಿ, ‘ಪ್ರೇಮಸಾಯಿ’ಯಾಗಿ ಅವತಾರವೆತ್ತಿರುವುದು ಸ್ಪಷ್ಟವಾಗಿದೆ. ಅವತಾರವೆಂದರೆ, ಭೌತಿಕ ಪುನರ್ಜನ್ಮವೆಂದು ಪರಿಭಾವಿಸದಿರಿ. ಚಿಂತನೆಗಳ ಪುನರ್ಜನ್ಮ. ಆಲೋಚನೆಗಳ ಪುನರ್ಪತಿಷ್ಠಾಪನೆ. ಇದೇ ‘ಸತ್ಯ’ ಸಾಕ್ಷಾತ್ಕಾರ.


No comments:

Post a Comment